
ದೆಹಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಕೆ ಎಕ್ಸ್ಪ್ರೆಸ್ ರೈಲಿಗೆ ಮಧ್ಯರಾತ್ರಿ ವ್ಯಕ್ತಿಯೋರ್ವನಿಂದ ಹುಸಿ ಬಾಂಬ್ ಬೆದರಿಕೆ ಕರೆ ಮಾಡಲಾಗಿದೆ. ಕೂಡಲೇ ವಾಡಿ ಜಂಕ್ಷನ್ ಬಳಿ ರೈಲು ತಪಾಸಣೆ ನಡೆಸಲಾಯಿತು. ಪೊಲೀಸರು ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಬಂಧಿತ ವ್ಯಕ್ತಿ ಉತ್ತರ ಪ್ರದೇಶ ಮೂಲದ ದೀಪ್ ಸಿಂಗ್ ರಾಥೋಡ್ (33) ಎಂದು ಗುರುತಿಸಲಾಗಿದೆ. ದೆಹಲಿ-ಬೆಂಗಳೂರು ಮಾರ್ಗವಾಗಿ ಸಂಚರಿಸುವ ಕೆಕೆ ಎಕ್ಸ್ಪ್ರೆಸ್ ರೈಲಿನಲ್ಲಿ ಆತನು ಪ್ರಯಾಣಿಸುತ್ತಿದ್ದ. ಈ ವೇಳೆ ಭಾನುವಾರ ಬೆಳಿಗ್ಗೆ ರೈಲ್ವೆ ನಿಯಂತ್ರಣ ಕೊಠಡಿಗೆ ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಕರೆ ಮಾಡುವ ಮೂಲಕ ಭಾರಿ ಭದ್ರತಾ ಭೀತಿಯನ್ನುಂಟುಮಾಡಿದ್ದಾನೆ. ಈ ಹಿನ್ನೆಲೆ ಪೊಲೀಸ್ ಅಧಿಕಾರಿಗಳು ರೈಲನ್ನು ವಾಡಿ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿ, ನಾಲ್ಕು ಗಂಟೆಗಳ ಕಾಲ ಸಂಪೂರ್ಣ ಭದ್ರತಾ ತಪಾಸಣೆ ಮಾಡಿದ್ದಾರೆ.